Monday, March 30, 2015

ಉನ್ನತ ಶಿಕ್ಷಣಕ್ಕೆ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ [vijaya karnataka]

ಉನ್ನತ ಶಿಕ್ಷಣಕ್ಕೆ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ
ಬಾಲೆಯರ ಬಲವರ್ಧನೆಗೆ ಮುಂದಾದ ಅಂಚೆ ಇಲಾಖೆ

* ನವೀನ್ ಬಿಲ್ಗುಣಿ ಹುಬ್ಬಳ್ಳಿ
ಅಕ್ವಗಾರ್ಡ್ ನೀರು ಶುದ್ಧೀಕರಣ ಯಂತ್ರ, ಮೈ ಸ್ಟಾಂಪಿಂಗ್, ಸೌರ ದೀಪ, ಪೋಸ್ಟ್ ಶಾಪಿ ಸೇರಿದಂತೆ ಹಲವು ಗ್ರಾಹಕ ಮತ್ತು ಜನಸ್ನೇಹಿ ಸೇವೆಗಳನ್ನು ನೀಡುತ್ತಿರುವ ಅಂಚೆ ಇಲಾಖೆ ಇದೀಗ ಕೇಂದ್ರ ಸರಕಾರದ 'ಸುಕನ್ಯಾ ಸಮೃದ್ಧಿ ಖಾತೆ ಯೋಜನೆ'ಯನ್ನೂ ಆರಂಭಿಸಿದೆ.

ಸಣ್ಣ ಉಳಿತಾಯಕ್ಕೆ ಉತ್ತೇಜನ, ಅಧಿಕ ಬಡ್ಡಿ ಸೌಲಭ್ಯ ಸೇರಿದಂತೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಮದುವೆಗಾಗಿ 'ಹೆಣ್ಣು ಮಗು ಉಳಿಸಿ-ಹೆಣ್ಣು ಮಗು ಓದಿಸಿ' ಎಂಬ ಘೋಷವಾಕ್ಯದೊಂದಿಗೆ ಬುಧವಾರದಿಂದ ಆರಂಭಿಸಲಾಗಿರುವ ಯೋಜನೆ ಕುರಿತು ಜಾಗೃತಿ ಮೂಡಿಸಲು ಅಂಚೆ ಇಲಾಖೆ ಅಧಿಕಾರಿಗಳು ಪಣ ತೊಟ್ಟಿದ್ದಾರೆ.

10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಲ್ಲಿ ಖಾತೆ ತೆರೆದು 21 ವರ್ಷಗಳ ಬಳಿಕ ಹಣ ಪಡೆಯುವ ಮಹತ್ವದ ಯೋಜನೆ ಇದಾಗಿದೆ. ಖಾತೆ ತೆರೆದ 14 ವರ್ಷಗಳವರೆಗೆ ಮಾತ್ರ ಹಣ ಜಮಾ ಮಾಡಬೇಕು. ಠೇವಣಿಯಲ್ಲಿ ಅರ್ಧದಷ್ಟು ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಬಳಕೆ ಮಾಡಿಕೊಳ್ಳಬಹುದು. ಹಾಗಾಗಿ ಎಲ್ಲ ಅಂಚೆ ಕಚೇರಿಗಳಲ್ಲಿ ಫ್ಲೆಕ್ಸ್, ನಾಮಫಲಕಗಳನ್ನು ಹಾಕುವ ಮೂಲಕ ಗ್ರಾಹಕರನ್ನು ಯೋಜನೆಯತ್ತ ಸೆಳೆಯಲು ಅಂಚೆ ಇಲಾಖೆ ಮುಂದಾಗಿದೆ.

2003 ಡಿಸೆಂಬರ್ 3 ಅಥವಾ ನಂತರದ ದಿನಗಳಲ್ಲಿ ಜನಿಸಿದ ಹೆಣ್ಣು ಮಗು ಖಾತೆ ಹೊಂದಲು ಅರ್ಹವಾಗಿರುತ್ತದೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದಾಗಿದ್ದು, ಖಾತೆ ಆರಂಭಕ್ಕೆ ಜನನ ಪ್ರಮಾಣ ಪತ್ರ ಹಾಗೂ ಪೋಷಕರ ವಿಳಾಸ ಮತ್ತು ಗುರುತಿನ ಚೀಟಿ ಪ್ರತಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.

ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಯೊಂದರಲ್ಲೇ ಬುಧವಾರ 5 ಖಾತೆ ತೆರೆಯಲಾಗಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಸಾವಿರಕ್ಕೂ ಅಧಿಕ ಖಾತೆಗಳನ್ನು ತೆರೆಯಲಾಗಿದೆ. ಒಂದು ಸಾವಿರ ರೂ. ಜಮಾ ಮಾಡುವ ಮೂಲಕ ಖಾತೆ ಆರಂಭಿಸಬೇಕು. ವರ್ಷಕ್ಕೆ 1.50 ಲಕ್ಷ ರೂ.ವರೆಗೂ ಜಮಾ ಮಾಡಬಹುದಾಗಿದೆ. ಮುಂದಿನ ಜಮಾವಣೆಗಳನ್ನು 100 ರೂ. ಗುಣಕದಲ್ಲಿ ಮಾಡಬೇಕು. ಖಾತೆ ಆರಂಭಗೊಂಡು 14 ವರ್ಷದವರೆಗೆ ಮಾತ್ರ ಹಣ ಜಮಾ ಮಾಡಬೇಕು ಎನ್ನುತ್ತಾರೆ ಹುಬ್ಬಳ್ಳಿ ಪ್ರಧಾನ ಕಚೇರಿ ಹಿರಿಯ ಅಂಚೆ ಅಧಿಕಾರಿ ಎಚ್.ಎಸ್.ಹುನಗುಂದ.

ಖಾತೆಯ ಮೇಲೆ ಶೇ. 9.1 ಬಡ್ಡಿ ಜತೆಗೆ ಪ್ರತಿವರ್ಷ ಚಕ್ರಬಡ್ಡಿಯೂ ಅನ್ವಯವಾಗಲಿದೆ. ಇದು ವಿಶೇಷ ಬಡ್ಡಿದರ. ದೇಶದ ಯಾವ ಸ್ಥಳಕ್ಕೆ ಬೇಕಿದ್ದರೂ ಖಾತೆ ವರ್ಗಾವಣೆ ಮಾಡಿಕೊಳ್ಳಬಹುದು. ಜತೆಗೆ 18 ವರ್ಷ ತುಂಬಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಸಲು ಮತ್ತು ಬಡ್ಡಿ ಸಮೇತ ಶೇ. 50 ಹಣ ಪಡೆದುಕೊಳ್ಳಬಹುದು. 21 ವರ್ಷದೊಳಗೆ ಮದುವೆ ಆದಲ್ಲಿ ಪೂರ್ಣ ಹಣ ವಾಪಸ್ ಪಡೆಯಲು ಅವಕಾಶವಿದೆ ಎನ್ನುತ್ತಾರೆ ಹುನಗುಂದ.
-----

ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬಡ್ಡಿ ದರ ಇದಾಗಿದ್ದು, ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರಕಾರ 'ಸುಕನ್ಯಾ ಸಮೃದ್ಧಿ ಖಾತೆ' ಯೋಜನೆ ಆರಂಭಿಸಿದೆ. ಬುಧವಾರ ಸರಕಾರದ ಆದೇಶದ ಪ್ರತಿ ಲಭಿಸಿದ್ದು, ಎಲ್ಲಾ ಅಂಚೆ ಕಚೇರಿಗಳಲ್ಲೂ ಖಾತೆ ತೆರೆಯಬಹುದಾಗಿದೆ.
* ನಾಗೇಶ ಮಾನ್ವಿ, ಧಾರವಾಡ ಹಿರಿಯ ಅಂಚೆ ಅಧೀಕ್ಷಕ

No comments:

Post a Comment