ಬೇಟಿ ಬಚಾವೊ ಬೇಟಿ ಪಡಾವೊ

ಪಾಣಿಪತ್ : ಹೆಣ್ಣು ಭ್ರೂಣಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ತೋರುವ ತಾರತಮ್ಯದ ಧೋರಣೆಯು ಜನರ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಇಲ್ಲಿ ಗುರುವಾರ ‘ಬೇಟಿ ಬಚಾವೊ ಬೇಟಿ ಪಡಾವೊ (ಹೆಣ್ಣು ಮಗು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೆಣ್ಣು ಭ್ರೂಣಹತ್ಯೆಗೆ ಪ್ರೋತ್ಸಾಹ ನೀಡುವ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ವೈದ್ಯರು ಇಂತಹ ಪಾಪ ಕೃತ್ಯ ಮಾಡುವ ಮೂಲಕ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದರು.
‘ಇನ್ನು ಮುಂದೆ ಹೆಣ್ಣು ಭ್ರೂಣಹತ್ಯೆ ಮಾಡುವುದಿಲ್ಲ ಮತ್ತು ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಮಾಡುವುದಿಲ್ಲ’ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರಿಗೆ ಪ್ರಧಾನಿ ಪ್ರತಿಜ್ಞಾವಿಧಿ ಭೋದಿಸಿದರು. ಹರಿಯಾಣವನ್ನು ಉಲ್ಲೇಖಿಸಿದ ಮೋದಿ, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತದ ಮೊದಲ ಮಹಿಳೆ ಕಲ್ಪನಾ ಚಾವ್ಲಾ ಹರಿಯಾಣದವರು. ಇಂತಹ ಮತ್ತಷ್ಟು ಕಲ್ಪನಾ ಚಾವ್ಲಾರನ್ನು ಭ್ರೂಣದಲ್ಲೇ ಹತ್ಯೆ ಮಾಡಲಾಗುತ್ತಿರುವುದು ನೋವಿನ ಸಂಗತಿ’ ಎಂದರು.
ಸುಕನ್ಯಾ ಸಮೃದ್ಧಿ ಯೋಜನೆ: ಪ್ರಧಾನಿ ಮೋದಿ ಇದೇ ವೇಳೆ ‘ಸುಕನ್ಯಾ ಸಮೃದ್ಧಿ ಯೋಜನೆ (ಹೆಣ್ಣು ಮಕ್ಕಳ ಅಭಿವೃದ್ಧಿ ಯೋಜನೆ)’ಗೆ ಚಾಲನೆ ನೀಡಿದರು. ಈ ಯೋಜನೆಯಡಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದರೆ ಆ ಖಾತೆಗೆ ಹೆಚ್ಚು ಬಡ್ಡಿ (ಶೇ 9.1) ಮತ್ತು ಆದಾಯ ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ಅಂಚೆ ಕಚೇರಿ ಮತ್ತು ವಾಣಿಜ್ಯ ಬ್ಯಾಂಕ್ಗಳ ಅಧಿಕೃತ ಶಾಖೆಗಳಲ್ಲಿ ಕನಿಷ್ಠ ₨1000ದಿಂದ ಗರಿಷ್ಠ ₨1.5 ಲಕ್ಷ ಠೇವಣಿಯಿಟ್ಟು ಈ ಖಾತೆ ಆರಂಭಿಸಬಹುದು.
No comments:
Post a Comment